fbpx

ಮಡಿಕೇರಿಯಲ್ಲಿ ಕರ್ನಾಟಕ ಪಕ್ಷಿ ಹಬ್ಬಕ್ಕೆ ತೆರೆ : ಪಕ್ಷಿ ವೀಕ್ಷಕರಿಂದ ವಿವಿಧೆಡೆ ಪಕ್ಷಿ ವೀಕ್ಷಣೆ

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಹಾಗೂ ಜಂಗಲ್‌ ಲಾಡ್ಜಸ್‌ ಮತ್ತು ರೆಸಾರ್ಟ್‌ ಆಶ್ರಯದಲ್ಲಿ ಮಡಿಕೇರಿ ನಗರ ಮತ್ತು ಸುತ್ತಲಿನ ಪ್ರದೇಶದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ಕರ್ನಾಟಕ ಪಕ್ಷಿ ಹಬ್ಬ : 2022 ಕ್ಕೆ ಭಾನುವಾರ ( ಏಪ್ರಿಲ್ 10 ರಂದು ) ತೆರೆಬಿತ್ತು.

ಪಕ್ಷಿ ಹಬ್ಬದ ಕಾರ‍್ಯಕ್ರಮದಲ್ಲಿ ಪಕ್ಷಿ ವೀಕ್ಷಕರು ಪಶ್ಚಿಮ ಘಟ್ಟ ಪ್ರದೇಶದ ಅಪರೂಪದ ಪಕ್ಷಿಗಳನ್ನು ವೀಕ್ಷಿಸುವ ಮೂಲಕ ಸಂತಸಪಟ್ಟರು.
ಮಡಿಕೇರಿ ನಗರ ಮತ್ತು ಸುತ್ತಲಿನ ಆಯ್ದ ಜಾಗಗಳಲ್ಲಿ ಪಕ್ಷಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ 8 ಜಾಗಗಳನ್ನು ಗುರುತಿಸಿ ಪಕ್ಷಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಮಡಿಕೇರಿ ಅರಣ್ಯ ಭವನದ ಬಳಿ, ಗಾಳಿಬೀಡು, ನಿಶಾನೆ ಬೆಟ್ಟ, ಮೊಣ್ಣಂಗೇರಿ, ಬೊಟ್ಟಪ್ಪ ದೇವಸ್ಥಾನದ ಸರಹದ್ದು ಸೇರಿದಂತೆ ಸುತ್ತಲಿನ ಸ್ಥಳಗಳಲ್ಲಿ ಪಕ್ಷಿ ಪ್ರಿಯರು ಪಕ್ಷಿ ವೀಕ್ಷಿಸಿದರು.

ಹಕ್ಕಿ ಹಬ್ಬದ ಸಂಭ್ರಮದಲ್ಲಿ ಮುಂಜಾನೆ ವೇಳೆಯಲ್ಲಿ ಮಂಜುವಿನೊಂದಿಗೆ ಮಡುಗಟ್ಟಿದ್ದ ಮಂಜಿನ ನಗರಿ ಮಡಿಕೇರಿ ಮತ್ತು ಸುತ್ತಲಿನ ಪಕ್ಷಿ ಸಂಕುಲಗಳ ತಾಣಗಳು ಪಕ್ಷಿ ಪ್ರಿಯರ ಮನಸ್ಸಿಗೆ ಮುದ ನೀಡಿದವು.

ಪಕ್ಷಿ ವೀಕ್ಷಣೆ ಕಡೆಗೆ ಜನರ ಗಮನ ಸೆಳೆಯಲು ಹಾಗೂ ಯುವ ವನ್ಯಜೀವಿ ಉತ್ಸಾಹಿಗಳಲ್ಲಿ ಪಕ್ಷಿಗಳ ಸಂರಕ್ಷಣೆಗೆ ಬಗ್ಗೆ ಆಸಕ್ತಿ ಬೆಳೆಸುವುದರೊಂದಿಗೆ ಕಾಡೊಳಗಿನ ಜೀವ ವೈವಿಧ್ಯದ ವಿಶೇಷತೆಯನ್ನು ಜನರಿಗೆ ಪರಿಚಯಿಸಲು ಹಕ್ಕಿ ಹಬ್ಬವನ್ನು ಆಯೋಜಿಸಲಾಗಿತ್ತು.

ಭಾನುವಾರ ನಡೆದ ಪಕ್ಷಿ ವೀಕ್ಷಣೆಯಲ್ಲಿ ಜಿ.ಪಂ.ಸಿಇಓ ಭನ್ವರ್ ಸಿಂಗ್ ಮೀನಾ,
ಮಡಿಕೇರಿ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ,
ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಶಿವರಾಮ್ ಬಾಬು, ಕರ್ನಾಟಕ ಪರಿಸರ ಪ್ರವಾಸೋದ್ಯಮ ವ್ಯವಸ್ಥಾಪಕ ನಿರ್ದೇಶಕ ತಡಗಣಿ ವಿ.ಗಣೇಶ್, ಕಾರ್ಯನಿರ್ವಾಹಕ ಸಹಾಯಕಿ ವನಶ್ರೀ, ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್ ಘಟಕದ ಕೊಡಗು ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್ ಸೇರಿದಂತೆ ಅರಣ್ಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.

ಪ್ರಮುಖವಾಗಿ ಹುಲಿ ಕೇಂದ್ರಿತ ವನ್ಯಜೀವಿ ಸಫಾರಿ ಮತ್ತು ಪ್ರವಾಸೋದ್ಯಮದಿಂದ ನವ ತಲೆಮಾರಿನ ವನ್ಯಜೀವಿ ಪ್ರೇಮಿಗಳನ್ನು ಪಕ್ಷಿಗಳ ಸುಂದರ ಲೋಕದ ಕಡೆಗೆ ತರುವ ಉದ್ದೇಶದಿಂದ ಹಕ್ಕಿ ಹಬ್ಬ ಕಾರ್ಯಕ್ರಮದ ಆಯೋಜಿಸಲಾಗಿತ್ತು
ಎಂದು ಮಡಿಕೇರಿ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ ಭಾನುವಾರ ತಿಳಿಸಿದರು.

ಪ್ರತಿ ವರ್ಷವೂ ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿ ಹಕ್ಕಿ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಸ್ಥಳದ ಆಯ್ಕೆ ಸಂದರ್ಭ ವಿಭಿನ್ನ ಭೌಗೋಳಿಕ ಪ್ರದೇಶ, ಜೈವಿಕ ವೈವಿಧ್ಯತೆ, ಬಗೆ ಬಗೆಯ ಪಕ್ಷಿಗಳು ಇರುವ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ . ಮಡಿಕೇರಿ ಪಕ್ಷಿ ಹಬ್ಬದಲ್ಲಿ ಪ್ರತಿ ಗುಂಪಿನವರು 60 ಕ್ಕೂ ಹೆಚ್ಚಿನ ವಿವಿಧ ಬಗೆಯ ಪಕ್ಷಿಗಳನ್ನು ಗುರುತಿಸಿ ವೀಕ್ಷಿಸಿದ್ದಾರೆ.

ಪ್ರತಿ ವರ್ಷ ಪಕ್ಷಿ ಹಬ್ಬದಲ್ಲಿ
ವಿಶೇಷ ಪಕ್ಷಿಯೊಂದರ ಮೇಲೆ
ಗಮನ ಕೇಂದ್ರೀಕರಿಸಲಾಗುತ್ತದೆ. ಈ ಬಾರಿ ಬಾಜಾ ಪಕ್ಷಿಯನ್ನು ಗುರುತಿಸಲಾಗಿತ್ತು ಎಂದು ಪೂವಯ್ಯ ತಿಳಿಸಿದರು.

ಮೂರು ದಿನಗಳ ಕಾಲ ನಡೆದ ಹಕ್ಕಿ ಹಬ್ಬದಲ್ಲಿ ನಾಡಿನ ವಿವಿಧ ಕಡೆಗಳಿಂದ ಪಕ್ಷಿ ತಜ್ಞರು, ಪಕ್ಷಿ ವೀಕ್ಷಕರು ಹಾಗೂ ಪರಿಸರ ಪ್ರೇಮಿಗಳು ಭಾಗವಹಿಸುವ ಮೂಲಕ ಪಕ್ಷಿಗಳ ಜೀವನ ಕ್ರಮವನ್ನು ಅಧ್ಯಯನ ನಡೆಸಿದರು. ಈ ಹಕ್ಕಿ ಹಬ್ಬವು ಪಶ್ಚಿಮ ಘಟ್ಟದ ವನ್ಯಜೀವಿಗಳ ಅಧ್ಯಯನಕ್ಕೆ ಉತ್ತಮ ಅವಕಾಶ ಕಲ್ಪಿಸಿದೆ ಎಂದು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಶಿವರಾಮ್ ಬಾಬು ತಿಳಿಸಿದರು.

ಹಕ್ಕಿ ಹಬ್ಬದ ಸಂದರ್ಭದಲ್ಲಿ ಶನಿವಾರ ಮತ್ತು ಭಾನುವಾರ ಈ ಎರಡು ದಿನಗಳಂದು ಏಳು ತಂಡಗಳಲ್ಲಿ ಪ್ರತಿದಿನ ಮುಂಜಾನೆ 6 ರಿಂದ 11 ಗಂಟೆ ತನಕ ಮಡಿಕೇರಿ ನಗರದ ಸುತ್ತಮುತ್ತಲಿನ ವಿವಿಧ ಸ್ಥಳಗಳಿಗೆ 12 ರಿಂದ 15 ಮಂದಿಯನ್ನು ಒಳಗೊಂಡ ಏಳು ತಂಡಗಳಲ್ಲಿ ಪಕ್ಷಿಗಳ ಚಿಲಿಪಿಲಿ, ಅವುಗಳ ಚಲನವಲನ ಹಾಗೂಜೀವನ ಕ್ರಮಗಳನ್ನು ಪಕ್ಷಿ ಪ್ರಿಯರು ಪಕ್ಷಿತಜ್ಞರಿಂದ ಪಡೆದುಕೊಂಡರು.

ನಿಸರ್ಗ ತಜ್ಞರಾದ ಪ್ರವಾಸೋದ್ಯಮ ಇಲಾಖೆಯ ರಾಹುಲ್ ಆರಾಧ್ಯ, ನಾಗರಾಜ್, ವಿಜಯ್ ಇತರರು ಪಕ್ಷಿಪ್ರಿಯರಿಗೆ ಪಕ್ಷಿಗಳ ಚಲನವನ ಹಾಗೂ ಅವುಗಳ ಆವಾಸಸ್ಥಾನದ ಬಗ್ಗೆ ಪೂರಕ ಮಾಹಿತಿ ನೀಡಿದರು.

ಹಕ್ಕಿ ಹಬ್ಬ ಕಾರ್ಯಕ್ರಮದಲ್ಲಿ
ಪಕ್ಷಿಗಳ ಜೀವನ ಕ್ರಮ ಹಾಗೂ ಜೀವ ಪರಿಸರ ಸಂರಕ್ಷಣೆ ಕುರಿತು ಪಕ್ಷಿ ತಜ್ಞ ಡಾ ಎಸ್.ವಿ.ನರಸಿಂಹನ್, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ ಸಿ.ಜಿ.ಕುಶಾಲಪ್ಪ ಸೇರಿದಂತೆ ವಿವಿಧ
ತಜ್ಞರಿಂದ ಉಪನ್ಯಾಸದೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿಕೊಡಲಾಯಿತು.
ಹಕ್ಕಿ ಹಬ್ಬದಲ್ಲಿ ಹಕ್ಕಿಗಳ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು. ಇದರಲ್ಲಿ ದೇಶದ ವಿವಿಧ ಭಾಗಗಳಿಂದ ಸಂಶೋಧಕರು, ವನ್ಯಜೀವಿ ಛಾಯಾಗ್ರಾಹಕರು , ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಶಿಕ್ಷಣಾರ್ಥಿಗಳು ಸೇರಿದಂತೆ ಪಕ್ಷಿ ವೀಕ್ಷಕರು, ಪಕ್ಷಿ ಪ್ರಿಯರು, ಅರಣ್ಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಭಾಗವಹಿಸಿದ್ದರು.

error: Content is protected !!