fbpx

ಇನ್ನಷ್ಟು ಧ್ಯಾನ್ ಚಂದರು ನಮ್ಮ‌ ದೇಶದಲ್ಲಿ ಉದಯಿಸಲಿ..

✍🏻ವಿನೋದ್ ಮೂಡಗದ್ದೆ,

ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದರ ಹುಟ್ಟಿದ ದಿನದ ನೆನಪಿನಲ್ಲಿ ಆಗಸ್ಟ್ ೨೯ ರಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತಿದೆ.

ಧ್ಯಾನ್ ಚಂದ್ ತಮ್ಮ ಅದ್ಭುತ ಕೈಚಳಕದಿಂದ ಇಡೀ ವಿಶ್ವವನ್ನೇ ಬೆರಗುಗೊಳಿಸಿದ ಹಾಕಿ ಮಾಂತ್ರಿಕ. ಧ್ಯಾನ್ ಚಂದ್ ರನ್ನು ಒಳಗೊಂಡ ತಂಡ ಮೈದಾನಕ್ಕೆ ಇಳಿದರೆ ಗೋಲುಗಳ ಮಳೆ ಸುರಿಯುವು ಖಂಡಿತ ಎನ್ನುವ ನಂಬಿಕೆ ಇತ್ತು‌. ಎದುರಾಳಿ ತಂಡ ಗೆಲ್ಲುವ ಆಸೆ ಬಿಟ್ಟು ಸೋಲಿನ ಅಂತರ ಕಡಿಮೆ ಮಾಡುವುದರ ಬಗ್ಗೆ ಯೋಚಿಸುತ್ತಿತ್ತು. ಅಂತಹ ಬಲಿಷ್ಠ ತಂಡ ನಮ್ಮದಾಗಿತ್ತು.

ಇಂದು‌ ನಮ್ಮ ದೇಶದ ಉದ್ದಗಲಕ್ಕೂ‌ ಅದೆಷ್ಟೋ ಯುವ ಪ್ರತಿಭೆಗಳು ಕಾಣಸಿಗುತ್ತಾರೆ. ಆದರೆ ಅವರಿಗೆ ಸೂಕ್ತ ಮಾರ್ಗದರ್ಶನ ಮತ್ತು ತರಬೇತಿಯ ಕೊರತೆಯಿಂದ ಎಲೆಮರೆ ಕಾಯಿಯಂತೆ ಮುನ್ನೆಲೆಗೆ ಬರದೆ ಅಲ್ಲಿಯೇ ತಮ್ಮ ಕ್ರೀಡಾ ಜೀವನವನ್ನು ಮುಗಿಸುತ್ತಿದ್ದಾರೆ.

ಹಿಮಾ ದಾಸ್ ರಂತಹ ಅಪ್ಪಟ್ಟ ದೇಸಿ ಪ್ರತಿಭೆಗಳು ಮುಖ್ಯ ಕ್ರೀಡಾಕೂಟದಲ್ಲಿ ಮಿಂಚಿದಾಗ ಮಾತ್ರ ಅವರತ್ತ ನಮ್ಮ ಗಮನ ಸೆಳೆಯುತ್ತದೆ ಹೊರತು‌ ನಾವಾಗಿಯೇ ಯಾಕೆ ಇಂತಹ ಪ್ರತಿಭೆಗಳನ್ನು ಹೊರತರುವ ಪ್ರಯತ್ನ ಮಾಡುತ್ತಿಲ್ಲ?

ಇಂದು ಸರಕಾರದ ಆಧೀನದಲ್ಲಿ ಕ್ರೀಡೆಯ ಉನ್ನತೀಕರಣಕ್ಕೆ‌ ಎಂದೇ ಇಲಾಖೆ ಇದ್ದರೂ ಕೂಡ ಅದರಿಂದ ಪ್ರಯೋಜನ ಪಡೆದವರು ಬೆರಳೆಯಷ್ಟು ಮಂದಿ ಮಾತ್ರ‌. ಲಂಚಗುಳಿತನ ಇಲ್ಲಿ ಕೂಡ ತನ್ನ ಕರಿಛಾಯೆನ್ನು ಹರಡೆ ಬಿಡಲಿಲ್ಲ. ಎಷ್ಟೋ ಕ್ರೀಡಾಪಟುಗಳು ಸರಿಯಾದ ತರಬೇತಿ‌ ಸಿಕ್ಕರೆ ವಿಶ್ವದಾಖಲೆಯನ್ನು ಬರೆಯಬಲ್ಲರು.

ವಿಷಾದದ ಸಂಗತಿಯೆಂದರೆ ಕೆಲವು ಕ್ರೀಡಾಕೂಟಗಳಿಗೆ ಕ್ರೀಡಾಪಟುಗಳನ್ನು ಆಯಾ ಶಾಲಾ ಕಾಲೇಜು ಕಳುಹಿಸುತ್ತಿದ್ದರೂ ಅವರಿಗೆ ತರಬೇತಿ ಕೊರೆತೆಯಿಂದ ಪದಕ ಗಳಿಸುವಲ್ಲಿ ವಿಫಲರಾಗುತ್ತಿದ್ದಾರೆ. ಪೋಲ್ ವಾಲ್ಟ್, ರೋಯಿಂಗ್, ಸೈಕ್ಲಿಂಗ್ ಹೀಗೆ ಬೇರೆ ಬೇರೆ ಕ್ರೀಡೆಗಳ ಉಪಕರಣಕ್ಕೇ ಲಕ್ಷಾಂತರ ಹಣ ಬೇಕಾಗುತ್ತದೆ. ಇದನ್ನು ಹೊಂದಿಸಲಾಗದೇ ಕ್ರೀಡೆಯಿಂದ ಹಿಂದೆ ಸರಿದವರೆಷ್ಟೋ? ಕೊಡುಗೈ ದಾನಿಗಳು ನೀಡಿದರೂ. ಒಂದೆರೆಡು ಕ್ರೀಡಾಕೂಟದಲ್ಲಿ ಭಾಗವಹಿಸಿದ ನಂತರ ಮುಂದಿನ ಹಂತದ ಖರ್ಚು ವೆಚ್ಚದ ಭಾರ ಅವನ ಮೇಲೆಯೇ ಬೀಳುತ್ತದೆ. ಕ್ರೀಡೆಯಲ್ಲಿಯೇ ಸಂಪೂರ್ಣ ತೊಡಗಿಸಿಕೊಂಡರೆ ಜೀವನ ಸಾಗಿಸುವುದು ಹೇಗೆ ಎನ್ನುವ ಪ್ರಶ್ನೆ ಕೂಡ ಕಾಡಿದ್ದಿದೆ. ಕೆಲವರಿಗೆ ಅದರಿಂದಲೇ ಉದ್ಯೋಗ ಸಿಕ್ಕಿದೆ. ಕೆಲವರು ಕ್ರೀಡೆಯನ್ನೇ ನಂಬಿ ನಂತರದ ಜೀವನೋಪಾಯಕ್ಕಾಗಿ ತರಕಾರಿ ವ್ಯಾಪಾರ ಮಾಡುವುದನ್ನ ನೋಡಿದ್ದೇವೆ‌.

ಶಾಲೆ, ಪೋಷಕರು, ನೆರೆಹೊರೆಯವರು, ಸಮಾಜ, ಸರಕಾರ ಹೀಗೆ ಎಲ್ಲರೂ ಏಕ ರೂಪದ ಸಹಾಯ ಹಾಗು ಆತ್ಮವಿಶ್ವಾಸವನ್ನು ತುಂಬಿದರೆ ಖಂಡಿತ ಇನ್ನಷ್ಟು ಪ್ರತಿಭೆಗಳು ಮುಂದೆ ಬರಲು ಸಾಧ್ಯ. ನಮ್ಮ ದೇಶ ಎಲ್ಲಾ ಕ್ರೀಡಾಕೂಟದಲ್ಲಿಯೂ ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನ ಅಲಂಕರಿಸುವುದು ಖಂಡಿತ‌.

ಒಂದು ಕಾಲದಲ್ಲಿ ಸುವರ್ಣ ಯುಗ ಕಂಡ ಭಾರತದ ರಾಷ್ಟ್ರ ಕ್ರೀಡೆ ಹಾಕಿ ಇತ್ತೀಚೆನ ವರ್ಷದಲ್ಲಿ ಒಲಂಪಿಕ್ಸ್ ಆರ್ಹತ ಸುತ್ತನ್ನೂ ಡಾಟಲು ಪರದಾಡುತ್ತಿದೆ. ಇನ್ನಾದರು ಕ್ರೀಡೆಗೆ ನಮ್ಮಲ್ಲಿ ಸರಿಯಾದ ಪ್ರೋತ್ಸಾಹ ಸಿಕ್ಕಲಿ. ಮತ್ತಷ್ಟು ಧ್ಯಾನ್ ಚಂದರು ಉದಯಿಸಲಿ.

✍🏻ವಿನೋದ್ ಮೂಡಗದ್ದೆ

error: Content is protected !!