ಹಿಜಾಬ್ ನೆಪದಲ್ಲಿ ಬಂದ್ ಆಗಿದ್ದ ನೆಲ್ಯಹುದಿಕೇರಿ ಮೆಡಿಕಲ್ ಶಾಪ್! ವರದಿಗೆ ಸ್ಪಷ್ಟನೆ

ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿ ನಡೆದ ರಾಜ್ಯ ಬಂದ್ ಸಂದರ್ಭದಲ್ಲಿ ನೆಲ್ಯಹುದಿಕೇರಿಯ ಮೆಡಿಕಲ್ ಶಾಪ್ ಬಂದ್ ಮಾಡಲಾಗಿದೆ ಹಾಗೂ ಬಿಜೆಪಿ ಸಿದ್ದಾಪುರ ಅಧ್ಯಕ್ಷ ಇದನ್ನು ಖಂಡಿಸಿರುವುದಾಗಿ ವೆಬ್ಸೈಟ್ ನಲ್ಲಿ ಸುದ್ದಿ ಪ್ರಕಟವಾಗಿತ್ತು. ಆದರೆ ಮೆಡಿಕಲ್ ಶಾಪ್ ಯಾಕಾಗಿ ಬಂದ್ ಮಾಡಲಾಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಪಡೆಯದ ಕಿಡಿಗೇಡಿಗಳು ಫೋಟೋ ತೆಗೆದು ದುರುದ್ದೇಶದಿಂದ ಸುಳ್ಳು ಪ್ರಚಾರ ಮಾಡಿರುತ್ತಾರೆ ಎಂದು ಅಂಗಡಿ ಮಾಲೀಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏನಿದು ಘಟನೆ: ದಿನಾಂಕ 17 ರಂದು ಪೂರ್ವ ನಿಗದಿಯಾಗಿದ್ದ ಮದುವೆ ಸಮಾರಂಭಕ್ಕೆ ತೆರಳುವ ಸಲುವಾಗಿ ಮೆಡಿಕಲ್ ಶಾಪ್ ಮಾಲಿಕ ಬಂದ್ ದಿನ ಬೆಳಿಗ್ಗೆ 10 ಗಂಟೆಯ ನಂತರ ಅಂಗಡಿಯನ್ನು ಮುಚ್ಚಿ ಮದುವೆಗೆ ತೆರಳಿದ್ದರು. ಪೂರ್ವ ನಿಗದಿಯಾಗಿದ್ದ ಮದುವೆ ಬಗ್ಗೆ ಕಟ್ಟಡದ ಮಾಲಿಕರಿಗೂ ಮೊದಲೇ ಮಾಹಿತಿ ಇತ್ತು. ಆದರೆ ಇದರ ಬಗ್ಗೆ ಮಾಹಿತಿ ಪಡೆಯದ ಕಿಡಿಗೇಡಿಗಳು ಮುಚ್ಚಿದ ಅಂಗಡಿಯ ಫೋಟೋ ತೆಗೆದು ಪ್ರಚಾರ ಮಾಡಿದ್ದಾರೆ. ಸತ್ಯಾಂಶವನ್ನು ತಿಳಿಯಲು ಮುಂದಾಗದ ಸಿದ್ದಾಪುರ ಬಿಜೆಪಿ ಅಧ್ಯಕ್ಷ ಪ್ರವೀಣ್ ಘಟನೆಗೆ ಕೋಮು ಬಣ್ಣ ಹಚ್ಚಲು ಪಕ್ಷದ ಹೆಸರಿನಲ್ಲಿ ಖಂಡನೆ ವ್ಯಕ್ತಪಡಿಸುತ್ತಿರುವುದಾಗಿ ಸುದ್ದಿ ವೆಬ್ಸೈಟ್ ಗೆ ಕಳಿಸಿರುತ್ತಾರೆ.
ಸುಳ್ಳು ಸುದ್ದಿ ಹಬ್ಬಿಸಿ ಕೋಮು ಬಣ್ಣ ಹಚ್ಚಿದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದರ ಬಗ್ಗೆ ಚಿಂತಿಸುವುದಾಗಿ ಅಂಗಡಿ ಮಾಲೀಕ ತಿಳಿಸಿದ್ದಾರೆ.