ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಎನ್.ಸಿ.ಸಿ. ನಿರ್ಣಾಯಕ ಪಾತ್ರ

ಕಾಪ್ಸ್ ನಲ್ಲಿ ಎನ್.ಸಿ.ಸಿ. ಹಿರಿಯರ ಘಟಕ ಉದ್ಘಾಟಿಸಿ ಕರ್ನಲ್ ಚೇತನ್ ಧಿಮನ್ ನುಡಿ
ಕೇಂದ್ರ ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಯುವ ಸೈನಿಕ ದಳ (ಎನ್.ಸಿ.ಸಿ.) ವಿದ್ಯಾರ್ಥಿಗಳನ್ನು ಭಾರತೀಯ ಸೈನ್ಯಕ್ಕೆ ಆಕರ್ಷಿಸಲು ಪ್ರೇರಣಾ ಶಕ್ತಿಯಾಗಿದೆ. ಜೊತೆಗೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿಯೂ ನಿರ್ಣಾಯಕ ಪಾತ್ರವಹಿಸುತ್ತಿದೆ ಎಂದು ಮಡಿಕೇರಿಯ 19ನೇ ಕರ್ನಾಟಕ ಎನ್.ಸಿ.ಸಿ. ಬೆಟಾಲಿಯನ್ ನ ಕಮಾಂಡಿಂಗ್ ಆಫೀಸರ್ ಕರ್ನಲ್ ಚೇತನ್ ಧಿಮನ್ ಅವರು ಹೇಳಿದರು.
ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ (ಕಾಪ್ಸ್) ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಕಾಲೇಜಿನಲ್ಲಿ ನೂತನವಾಗಿ ಆರಂಭಿಸಲಾಗಿರುವ ಎನ್.ಸಿ.ಸಿ. ಹಿರಿಯರ ಘಟಕ (ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ) ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಸ್ತು, ಬದ್ಧತೆ ಮತ್ತು ಸೇವಾಮನೋಭಾವದ ಪ್ರಮುಖ ಆಶ್ರಯವನ್ನು ಹೊಂದಿರುವ ಎನ್.ಸಿ.ಸಿ., ವಿದ್ಯಾರ್ಥಿಗಳನ್ನು ಪರಿಪೂರ್ಣತೆಯೆಡೆಗೆ ಕೊಂಡೊಯ್ಯಲು ಹೆಚ್ಚು ನೆರವಾಗುತ್ತಿದೆ. ಈ ಕಾರಣದಿಂದಲೇ ಎನ್.ಸಿ.ಸಿ. ಇಂದು ರಾಷ್ಟ್ರದಾದ್ಯಂತ ಹೆಚ್ಚು ಜನಪ್ರಿಯಗೊಂಡಿದೆ. ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಎನ್.ಸಿ.ಸಿ.ಯಿಂದಲೆ ತಮ್ಮ ಭವಿಷ್ಯ ರೂಪಿಸಿಕೊಂಡಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.