ರಾಷ್ಟ್ರ ಮಟ್ಟದ 3 ದಿನಗಳ ಕಾರ್ಯಗಾರಕ್ಕೆ ಭಾಗಮಂಡಲ ಗ್ರಾ.ಪಂ ಆಯ್ಕೆ

ಮಡಿಕೇರಿ ಸೆ.15:-ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿ ಸೆಪ್ಟಂಬರ್ 22 ರಿಂದ 3 ದಿನಗಳ ಕಾಲ ನಡೆಯಲಿರುವ ರಾಷ್ಟ್ರ ಮಟ್ಟದ ಕಾರ್ಯಗಾರಕ್ಕೆ ತಾಲ್ಲೂಕಿನ ಭಾಗಮಂಡಲ ಗ್ರಾಮ ಪಂಚಾಯಿತಿ ಆಯ್ಕೆಯಾಗಿದೆ ಎಂದು ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಅವರು ತಿಳಿಸಿದ್ದಾರೆ.

ಭಾರತ ಸರ್ಕಾರ, ಕೇಂದ್ರ ಜಲಶಕ್ತಿ ಮಂತ್ರಾಲಯ, ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಇವರ ಸಹಯೋಗದಲ್ಲಿ ಸ್ಥಳೀಯವಾಗಿ ಸುಸ್ಥಿರ ಅಭಿವೃದ್ಧಿಯ ಗುರಿಗಳು ವಿಚಾರವಾಗಿ 3 ದಿನಗಳ ಕಾರ್ಯಗಾರ ನಡೆಯಲಿದೆ.

ದೇಶದಲ್ಲಿಯೇ ಗುಜರಾತ್, ಕರ್ನಾಟಕ, ಮಹರಾಷ್ಟ್ರ, ತೆಲಂಗಾಣ ಮತ್ತು ಉತ್ತರಪ್ರದೇಶ ರಾಜ್ಯದ 5 ಗ್ರಾಮ ಪಂಚಾಯಿತಿಗಳು ಮಾತ್ರ ಈ ಕಾರ್ಯಗಾರದಲ್ಲಿ ಭಾಗಿಯಾಗುತ್ತಿದ್ದು, ಈ ಪೈಕಿ ಕರ್ನಾಟಕದಿಂದ ಭಾಗಮಂಡಲ ಗ್ರಾಮ ಪಂಚಾಯಿತಿ ಆಯ್ಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ. 

ಕಾರ್ಯಗಾರದಲ್ಲಿ ಭಾಗಮಂಡಲ ಗ್ರಾ.ಪಂಚಾಯತ್‍ನಲ್ಲಿ ನಿರ್ಮಿಸಲಾಗಿರುವ ಮಲತ್ಯಾಜ್ಯ ಸಂಸ್ಕರಣಾ ಘಟಕ ಕುರಿತಂತೆ ಮಾಹಿತಿ ಮತ್ತು ಕಾರ್ಯವಿಧಾನವನ್ನು ಪ್ರಸ್ತುತಿ ಪಡಿಸಲಾಗುತ್ತದೆ. ಈ ಸಂಬಂಧ ದೇಶದ ಅತ್ಯುನ್ನತ ಕಾರ್ಯಗಾರಕ್ಕೆ ಭಾಗಮಂಡಲ ಗ್ರಾಮ ಪಂಚಾಯಿತಿಯು ಆಯ್ಕೆಯಾಗಲು ಶ್ರಮಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು, ಮಡಿಕೇರಿ ತಾ.ಪಂ. ಅಧಿಕಾರಿ ವೃಂದ, ಭಾಗಮಂಡಲ ಗ್ರಾಮ ಪಂಚಾಯತಿಯ ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿವರ್ಗ ಮತ್ತು ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ವಿಭಾಗದ ಸಿಬ್ಬಂದಿಗಳಿಗೆ ಕೊಡಗು ಜಿ.ಪಂ.ವತಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ.

error: Content is protected !!