ಮಸೀದಿಗಳಲ್ಲಿನ ಲೌಡ್ ಸ್ಪೀಕರ್ ತೆಗೆಯಿರಿ: ರಾಜ್ ಠಾಕ್ರೆ ಎಚ್ಚರಿಕೆ

ಮುಂಬೈ: ಕರ್ನಾಟಕದಲ್ಲಿ ಹಿಜಾಬ್-ಕೇಸರಿ ಶಾಲು ಸಂಘರ್ಷ ಉಂಟಾದಂತೆ ಮಹಾರಾಷ್ಟ್ರದಲ್ಲಿ ಮತ್ತೊಂದು ರೀತಿಯ ಸಂಘರ್ಷ ಉಂಟಾದರೂ ಅಚ್ಚರಿ ಏನಿಲ್ಲ. ಏಕೆಂದರೆ ಅಲ್ಲಿನ ಸರ್ಕಾರಕ್ಕೆ ರಾಜ್ ಠಾಕ್ರೆ ಸವಾಲೊಂದನ್ನು ಎಸೆದಿದ್ದಾರೆ.
ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್) ಮುಖಂಡ ರಾಜ್ ಠಾಕ್ರೆ, ಮುಂಬೈನ ಮಸೀದಿಗಳಲ್ಲಿನ ಲೌಡ್ ಸ್ಪೀಕರ್ ತೆಗೆಸುವ ನಿರ್ಧಾರ ತೆಗೆದುಕೊಳ್ಳುವಂತೆ ಅಲ್ಲಿನ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನಾನು ಪ್ರಾರ್ಥನೆಗೆ ವಿರೋಧಿಯಲ್ಲ, ಆದರೆ ಮಸೀದಿಯಲ್ಲಿ ಲೌಡ್ ಸ್ಪೀಕರ್ ಹಾಕಬಾರದು ಎಂದಿದ್ದಾರೆ.
ಅಷ್ಟೇ ಅಲ್ಲ, ಒಂದು ವೇಳೆ ಸರ್ಕಾರ ಮಸೀದಿಗಳಲ್ಲಿನ ಲೌಡ್ ಸ್ಪೀಕರ್ ತೆಗೆಸದಿದ್ದರೆ ತಾವು ಮಸೀದಿ ಮುಂದೆ ಲೌಡ್ಸ್ಪೀಕರ್ ಹಾಕಿ ಹನುಮಾನ್ ಚಾಲೀಸ ಬಿತ್ತರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇನ್ನು ಉತ್ತರಪ್ರದೇಶದ ಸರ್ಕಾರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ಅಲ್ಲಿ ಉತ್ತಮ ಅಭಿವೃದ್ಧಿ ಆಗುತ್ತಿದೆ, ಅಂಥದ್ದೇ ಅಭಿವೃದ್ಧಿಯನ್ನು ಮಹಾರಾಷ್ಟ್ರದಲ್ಲಿ ಬಯಸುತ್ತಿರುವುದಾಗಿ ಹೇಳಿದ್ದಾರೆ. ಜತೆಗೆ ತಾವು ಹಿಂದುತ್ವದ ವಿಚಾರವಾಗಿ ಮಾತನಾಡಲಿರುವುದಾಗಿ ಹೇಳಿರುವ ಅವರು ಅಯೋಧ್ಯೆಗೆ ಭೇಟಿ ನೀಡಲಿರುವುದನ್ನೂ ತಿಳಿಸಿದ್ದಾರೆ.