ಬೇಟೆ ಪ್ರಕರಣದ ಆರೋಪಿಗಳ ಬಂಧನ

ಮಡಿಕೇರಿ ಏ.4 : ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಕಡವೆ ಮತ್ತು ಜಿಂಕೆ ಮಾದರಿಯ ಹೆಣ್ಣು ಕೂರೆಯನ್ನು ಬೇಟೆಯಾಡಿದ ಆರೋಪದಡಿ ಐವರನ್ನು ಬಂಧಿಸಲಾಗಿದೆ. ಏಳು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಐದು ಮಂದಿ ಆರೋಪಿಗಳೊಂದಿಗೆ ಮಾಂಸ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರವಾಹನ ಹಾಗೂ ಪರಿಕರಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳುವಶಕ್ಕೆ ಪಡೆದಿದ್ದರೆ, ಏಳು ಮಂದಿ ಪರಾರಿಯಾಗಿದ್ದಾರೆ.
ಬಂಧಿತರಿಂದ 5 ದ್ವಿಚಕ್ರ ವಾಹನಗಳು, ಎರಡು ಸಿಂಗಲ್ ಬ್ಯಾರಲ್ ಬಂದೂಕುಗಳು, ಬ್ಯಾಟರಿಗಳು, ಕೃತ್ಯಕ್ಕೆ ಬಳಸಿದ್ದ ಪರಿಕರಗಳು, ಕಡವೆ ಮಾಂಸ ಹಾಗೂ ಹೆಣ್ಣು ಕೂರೆಯ ಕಳೆಬರವನ್ನು ವಶಪಡಿಸಿಕೊಳ್ಳಲಾಗಿದೆ.
ನಾಗರಹೊಳೆ ಉದ್ಯಾನವನದ ಹುಣಸೂರು ವನ್ಯಜೀವಿ ವಲಯದ ದೊಡ್ಡಹರವೆ ಮೀಸಲು ಅರಣ್ಯ ಪ್ರದೇಶದಲ್ಲಿ ಈ ಕೃತ್ಯ ನಡೆದಿದ್ದು, ಉಳಿದ ಆರೋಪಿಗಳ ಪತ್ತೆಗಾಗಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.