ಬೀಡಾಡಿ ದನಗಳನ್ನು ದತ್ತು ಪಡೆದರೆ 900-1000 ನೆರವು

ಫೆಬ್ರವರಿ 23: ಉತ್ತರ ಪ್ರದೇಶದಲ್ಲಿ ಬಿಡಾಡಿ ದನಗಳನ್ನು ದತ್ತು ಪಡೆದುಕೊಳ್ಳುವ ರೈತರಿಗೆ 900 ರಿಂದ 1,000 ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಸಿಎಂ ಯೋಗಿ ಆದಿತ್ಯನಾಥ್ ಭರವಸೆ ನೀಡಿದ್ದಾರೆ.
ರಾಜ್ಯದ ಪೂರ್ವದಲ್ಲಿ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಬಿಡಾಡಿ ದನಗಳ ಸಮಸ್ಯೆಯು ಭಾರತೀಯ ಜನತಾ ಪಕ್ಷಕ್ಕೆ ಬೆನ್ನು ಬಿಡದೇ ಕಾಡುತ್ತಿದೆ. ಈ ಹಿನ್ನೆಲೆ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಲ್ಲೇಖಿಸಿದ್ದಾರೆ.
ಗೋಮಾತೆ ವಧೆಗೆ ಬಿಡುವುದಿಲ್ಲ ಎಂದ ಯೋಗಿ:
ಉತ್ತರ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆಗಳನ್ನು ಸಂಪೂರ್ಣ ಬಂದ್ ಮಾಡಿಸಿದ್ದೇವೆ. ನಾವು ಗೋಮಾತೆ ಎಂದರೆ ಗೋವುಗಳ ವಧೆ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಭರವಸೆ ನೀಡುತ್ತೇನೆ. ರಾಜ್ಯದಲ್ಲಿ ರೈತರ ಹೊಲಗಳನ್ನು ಬಿಡಾಡಿ ದನಗಳಿಂದ ರಕ್ಷಿಸುತ್ತೇವೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಯೋಗಿ ಸಮಾವೇಶದ ಮೈದಾನಕ್ಕೆ ಬಿಡಾಡಿ ದನ:
ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರ್ಯಾಲಿ ನಡೆಯುತ್ತಿದ್ದ ಬಹಿರಂಗ ಮೈದಾನದಲ್ಲಿ ಮಂಗಳವಾರ ಬಿಡಾಡಿ ದನಗಳನ್ನು ಬಿಡುವ ಮೂಲಕ ರೈತರು ಸರ್ಕಾರಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ಸಖತ್ ವೈರಲ್ ಆಗಿತ್ತು. ರೈತ ಮುಖಂಡ ರಮಣದೀಪ್ ಸಿಂಗ್ ಮಾನ್ ಟ್ವೀಟ್ ಮಾಡಿರುವ ಈ ವಿಡಿಯೋದಲ್ಲಿ ನೂರಾರು ಜಾನುವಾರುಗಳು ತೆರೆದ ಮೈದಾನದಲ್ಲಿ ಇರುವುದನ್ನು ತೋರಿಸಿತು. ಸದ್ಯಕ್ಕೆ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಡಾಡಿ ದನಗಳ ಹಾವಳಿ ಪ್ರಮುಖ ಚುನಾವಣಾ ವಿಷಯವಾಗಿದೆ.
ನಾಲ್ಕನೇ ಹಂತದ ಮತದಾನ:
ಉತ್ತರ ಪ್ರದೇಶದಲ್ಲಿ ನಾಲ್ಕನೇ ಹಂತದ ಚುನಾವಣೆಗೆ ಬುಧವಾರ ಮತದಾನ ನಡೆಯುತ್ತಿದೆ. ನಾಲ್ಕನೇ ಹಂತದಲ್ಲಿ ರಾಜ್ಯದ ಒಂಬತ್ತು ಜಿಲ್ಲೆಗಳ 59 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಈ ಹಂತದಲ್ಲಿ 59 ವಿಧಾನಸಭಾ ಸ್ಥಾನಗಳಿಗೆ 624 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಲ್ಕನೇ ಹಂತದ ಮತದಾನವೂ ಬೆಳಗ್ಗೆ 7 ಗಂಟೆಗೆ ಆರಂಭವಾಗಲಿದ್ದು, ಸಂಜೆ 6 ರವರೆಗೆ ನಡೆಯಲಿದೆ.