ಕೊಡಗಿನ ವಿದ್ಯಾರ್ಥಿಗಳು ಉಕ್ರೇನ್’ನ ಗಡಿ ಭಾಗದಲ್ಲಿರುವುದರಿಂದ ಏರ್ ಲಿಫ್ಟ್ ವಿಳಂಬ: ಕೆ.ಜಿ.ಬೋಪಯ್ಯ

ಉಕ್ರೇನ್ನ ಗಡಿಭಾಗಗಳಲ್ಲೇ ನಡೆಯುತ್ತಿರುವ ಯುದ್ಧದಿಂದ ಅಲ್ಲಿಯ ಗಡಿ ಭಾಗದಲ್ಲಿರುವವರನ್ನು ಕರೆತರುವ ಕೆಲಸ ವಿಳಂಬವಾಗುತ್ತಿದೆ. ಕೊಡಗು ಜಿಲ್ಲೆಯ ವಿದ್ಯಾರ್ಥಿಗಳು ಅಲ್ಲೇ ಸಿಲುಕಿರುವುದರಿಂದ ಜನಪ್ರತಿನಿಧಿಗಳಾಗಿ ನಾವು ಹೆಚ್ಚು ಗಮನ ಹರಿಸಬೇಕಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದರು.
ಮಡಿಕೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾನಾಡಿದ ಅವರು, ಉಕ್ರೇನ್ ಹಾಗೂ ರಷ್ಯಾದ ನಡುವೆ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಉಕ್ರೇನ್ನಲ್ಲಿ ಸಿಲುಕಿಕೊಂಡಿರುವ ಭಾರತೀಯರಿಗೆ ಆಹಾರ ಕೊರತೆ ಎದುರಾಗಿದೆ. ಮಾನವೀಯತೆ ಇಲ್ಲದ ಪರಿಸ್ಥಿತಿ ರಷ್ಯಾದಿಂದ ನಿರ್ಮಾಣವಾಗುತ್ತಿದೆ ಎಂದು ಅವರು ನುಡಿದರು.
ಈಗಾಗಲೇ ಎಷ್ಟು ಜನ ಭಾರತೀಯರು ಉಕ್ರೇನ್’ನಲ್ಲಿ ಸಿಲುಕಿಕೊಂಡಿದ್ದಾರೆಂದು ಕೇಂದ್ರ ಸರಕಾರ ಮಾಹಿತಿ ಕಲೆಹಾಕುತ್ತಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಎಲ್ಲರನ್ನೂ ಹೊಸ ಯೋಜನೆಯನ್ನೇ ಮಾಡಿ ಏರ್’ಲಿಫ್ಟ್ ಮಾಡುವ ಕೆಲಸಗಳು ನಡೆಯುತ್ತಿದೆ ಎಂದು ಹೇಳಿದರು.
ಕೊಡಗಿನ ವಿದ್ಯಾರ್ಥಿಗಳು ಯುದ್ಧ ನಡೆಯುತ್ತಿರುವ ಉಕ್ರೇನ್ ಗಡಿ ಭಾಗದಲ್ಲೇ ಇರುವುದರಿಂದ ಅಲ್ಲಿರುವವರನ್ನು ಕರೆತರುವ ಕೆಲಸ ವಿಳಂಬವಾಗುತ್ತಿದೆ. ಜನಪ್ರತಿನಿಧಿಯಾಗಿ ನಾವು ಹೆಚ್ಚು ಗಮನಹರಿಸಬೇಕಿದ್ದು, ಸಂಬಂಧಪಟ್ಟ ಕರ್ನಾಟಕದ ಅಧಿಕಾರಿಗಳ ಜೊತೆಯೂ ದೂರವಾಣಿ ಸಂಪರ್ಕ ಮಾಡಿ ವ್ಯವಸ್ಥೆಗಳನ್ನು ಮಾಡವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.